ಕೊರಟಗೆರೆ : 112ವರ್ಷಗಳವರೆಗೂ ಸಹಿತ ನಿರಂತರವಾಗಿ ದಾಸೋಹದ ಮುಖಾಂತರವಾಗಿ ತಮ್ಮ ಕಾಯಕವನ್ನು ದೇವರ ಕೆಲಸವೆಂದು ತಿಳಿದು, ಕಾಯಕವೇ ಕೈಲಾಸವೆಂಬಂತೆ ಶ್ರೀ ಮಠವನ್ನು ನಡೆಸಿಕೊಂಡು ಬಂದಿರುವ ತ್ರಿವಿಧ ದಾಸೋಹಿಗಳಾದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ನಮಗೆಲ್ಲ ಆದರ್ಶ ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ನುಡಿದರು.
ಕೊರಟಗೆರೆ ಪಟ್ಟಣಪಂಚಾಯಿತಿ ಮುಂಭಾಗದಲ್ಲಿ ಅಖಿಲಭಾರತ ವೀರಶೈವ ಮಹಾಸಭಾ ಹಾಗೂ ಸಮಸ್ತ ಭಕ್ತಾದಿಗಳಿಂದ ಆಯೋಜಿಸಿದ್ದ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮೆಲ್ಲರಿಗೂ ಸಹಿತ ಆರಾಧ್ಯದೈವವಾಗಿ, ನಡೆದಾಡುವ ದೇವರಾಗಿ ನಮ್ಮ ಬದುಕಿನೂದಕ್ಕೂ ಕಾಯಕವನ್ನೇ ಕೈಲಾಸವೆಂದು ನಂಬಿ ನಿರಂತರವಾಗಿ ಸದ್ಭಕ್ತರ ಸೇವೆಯಲ್ಲಿಯೇ ತೊಡಗಿಸಿಕೊಂಡು ನಮಗೆಲ್ಲ ಆದರ್ಶಗಳನ್ನು ನೀಡಿರುವ ಪೂಜ್ಯರಿಗೆ ಭಕ್ತಿ ಪೂರಕ ನಮನ ಸಲ್ಲಿಸುತ್ತಾ ಅವರ ಮಾರ್ಗದರ್ಶನದಂತೆ ನಡೆಯೋಣ ಎಂದರು.
ಶ್ರೀಗಳ ಜೀವನದ ತತ್ತ್ವಗಳು ಯುವಜನತೆಗೆ ಮಾರ್ಗದರ್ಶಕವಾಗಬೇಕು” ಎಂದು ಅವರು ಶುಭ ಹಾರೈಸಿದರು.
ಅಕ್ಷರ ಮತ್ತು ಅನ್ನದಾಸೋಹ ಸಾವಿರಾರು ವಿದ್ಯಾರ್ಥಿಗಳ ಬಾಳಲಿ ಬೆಳಕಾಗಿದೆ. ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿ ಹೊಂದಿ ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಮಾದರಿಯಾದಂತಹ ಶ್ರೀ ಶಿವಕುಮಾರ ಸ್ವಾಮಿಗಳನ್ನು ಪಡೆದ ನಾವೇ ಧನ್ಯರು ಎಂದು ತಾಲ್ಲೂಕಿನ ಅಖಿಲಭಾರತ ವೀರಶೈವ ಮಹಾ ಸಭಾದ ಆಧ್ಯಕ್ಷರಾದ ವೀರಭದ್ರಯ್ಯ ಶ್ರೀಗಳಿಗೆ ನಮನ ಸಲ್ಲಿಸಿ ಮಾತನಾಡಿದರು.

ಪರಮ ಪೂಜ್ಯರ ಜನ್ಮದಿನನೋತ್ಸವವು ಹಬ್ಬದದಂತೆ ಕಳೆಕಟ್ಟಿತ್ತು. ಸಾವಿರಾರು ಭಕ್ತಾದಿಗಳು ಭಾಗವಹಿಸಿ ಭಕ್ತಿನಮನ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದುಕೊಂಡರು.
ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಸ್ವತಃ ತಾವೇ ಪ್ರಸಾದ ವಿತರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಭದ್ರಣ್ಣ, ಉಪಾಧ್ಯಕ್ಷ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಚೆನ್ನಬಸವರಾಧ್ಯ, ಖಜಾಂಚಿ ಜಿ.ಎಂ ಶಿವಾನಂದ್, ಜಗಜ್ಯೋತಿ ಬಸವೇಶ್ವರ ದೇವಾಲಯದ ಅಧ್ಯಕ್ಷ ಕೆ.ಎಂ ಸುರೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಕೆ.ಆರ್ ಕಿರಣ್, ಮಹಿಳಾ ಸದಸ್ಯರಾದ ಮಂಜುಳಾ ಶಂಭುಲಿಂಗಾರಾಧ್ಯ, ಚಂದ್ರಕಲಾ ಲೋಕೇಶ್, ಹಿರಿಯ ಮುಖಂಡರಾದ ಪರ್ವತಯ್ಯ, ಡೇರಿ ಸದಾಶಿವಯ್ಯ, ಜ್ಯೋತಿಪ್ರಕಾಶ್, ಕೊಡ್ಲಹಳ್ಳಿ ಆರಾಧ್ಯ, ಸೇರಿದಂತೆ ಹಲವು ಸಂಘಟನೆಗಳ ಮತ್ತು ಸಮುದಾಯದ ಮುಖಂಡರು.
ಇದೇ ಸಂದರ್ಭದಲ್ಲಿ ಪ್ರವಚನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಕೊರಟಗೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಶಿವಕುಮಾರ ಶ್ರೀಗಳ ಜನ್ಮ ದಿನೋತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.