ತುಮಕೂರು: ರಾಜಕಾರಣಿಗಳು ಮಾಧ್ಯಮಗಳ ಮೇಲೆ ಮಾಲೀಕತ್ವ ಸಾಧಿಸುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ರಾಜಕಾರಣಿಗಳನ್ನು ಚುನಾವಣೆಯ ಮೂಲಕವೇ ಮಣಿಸಬೇಕಿದೆ ಎಂದು ಅಮೇರಿಕಾದ ವೆಬರ್ ಸ್ಟೇಟ್ ಯುನಿವರ್ಸಿಟಿಯ ರಾಜ್ಯಶಾಸ್ತ್ರ ಅಧ್ಯಾಪಕ ಪ್ರೊ. ರಾಮಕೃಷ್ಣ ರೆಡ್ಡಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು “ದ ಗ್ರೋಯಿಂಗ್ ತ್ರೆಟ್ ಟೂ ಡೆಮಾಕ್ರಸಿ ಎ ಗ್ಲೋಬಲ್ ಸಿನೇರಿಯೋ” ಎಂಬ ವಿಷಯದ ಕುರಿತು ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ನಿಗ್ರಹಿಸಬೇಕಾದ ಮಾಧ್ಯಮಗಳೇ ಭ್ರಷ್ಟಾಚಾರಕ್ಕೆ ಒಳಗಾಗುತ್ತಿವೆ. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವಲ್ಲಿ ಸ್ವತಂತ್ರ ಮಾಧ್ಯಮಗಳ ಅವಶ್ಯಕತೆ ಇದೆ. ಮಾಧ್ಯಮಗಳು ನೇರ ವರದಿಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಚುನಾವಣೆಯೇ ಉತ್ತಮ ಮಾರ್ಗ. 1977ರ ತುರ್ತು ಪರಿಸ್ಥಿತಿಯ ನಂತರದ ಚುನಾವಣೆಯಲ್ಲಿ ನಿಜವಾದ ಪ್ರಜಾಪ್ರಭುತ್ವದ ಶಕ್ತಿ ಪ್ರದರ್ಶನವಾದದ್ದು, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಅದರ ಮೇಲೆ ನಂಬಿಕೆ, ವಿಶ್ವಾಸವನ್ನಿಟ್ಟು, ಸಹಕಾರ ಮನೋಭಾವದಿಂದ ಒಂದುಗೂಡಿ ಕೆಲಸ ಮಾಡಿದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಮಾತನಾಡಿ, ಪ್ರಜೆಗಳಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಅರಿವು ಮೂಡಬೇಕಿದೆ. ಪ್ರಶ್ನಿಸೋದು ಪ್ರಜಾಪ್ರಭುತ್ವದ ಮೂಲ ಧರ್ಮ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಖಂಡಿಸುವ ಮತ್ತು ಪ್ರಶ್ನಿಸುವ ಮನೋಭಾವವನ್ನು ಯುವಜನರು ಬೆಳೆಸಿಕೊಳ್ಳಬೇಕಿದೆ ಎಂದರು.
ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ ಬಸವರಾಜ ಜಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಐಪಿಎಸ್ ಕೆ.ಅರ್ಕೇಶ್, ಮಾಜಿ ಎಂಎಲ್ಸಿ ಮಹೇಶ್, ಸಮಾಜಿಕ ಚಿಂತಕರಾದ ಪ್ರೊ.ದೊರೈರಾಜ್, ಚರಕ ಆಸ್ಪತ್ರೆಯ ಡಾ. ಬಸವರಾಜ್, ಸಹ ಪ್ರಾಧ್ಯಾಪಕ ಪ್ರೊ.ರಾಮಕೃಷ್ಣ ವಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಂಗಸ್ವಾಮಿ, ಮತ್ತಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.